Tuesday, September 05, 2006

ಮರೆಯಲಾರದ ಶಾಲಾ ಪಾಠಗಳು

ಒಳ್ಳೆಯ ಅಧ್ಯಾಪಕರು ಮತ್ತು ಅವರ ಪಾಠಗಳು ವಿದ್ಯಾರ್ಥಿಗಳ ಮನಸಿನ ಮೇಲೆ ಹೇಗೆ ಮರೆಯಲಾಗದ ಪ್ರಭಾವ ಬೀರುತ್ತವೋ, ಹಾಗೆಯೇ ಕೆಲವು ಅಸಮರ್ಥ ಉಪಾಧ್ಯಾಯರು ಮತ್ತು ಅವರ ತಪ್ಪು ತಪ್ಪಾದ ಪಾಠಗಳನ್ನೂ ಮರೆಯಲಸಾಧ್ಯವೇ....

ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಕನ್ನಡ ಮೇಷ್ಟ್ರು ಎರಡನೇ ವರ್ಗಕ್ಕೆ ಸೇರಿದವರು....

ಅವರ ಪಾಠಗಳ ಕೆಲವು ತುಣುಕುಗಳು ಇಲ್ಲಿವೆ:

  • ಬಸವಣ್ಣನವರು ಹೋರಾಡಿದ್ದು "ವರ್ಣ ವ್ಯವಸ್ಥೆ"ಯ ವಿರುದ್ಧ. "ವರ್ಣ ವ್ಯವಸ್ಥೆ" ಎಂದರೆ ಬಿಳಿಯರು (ಬ್ರಿಟಿಷರು) ಭಾರತೀಯರ ಬಗ್ಗೆ ತೋರುತ್ತಿದ್ದ ತಾರತಮ್ಯ!!!
  • ಆಸ್ಪತ್ರೆಗೆ ಹೋಗುವುದು ಚಿಕಿತ್ಸೆ ಪಡೆಯಲು ಅಲ್ಲ - "ಚಿಕಿಸ್ತೆ"ಗಾಗಿ!!!
  • ದ್ರೌಪದಿಗೆ ಪಾಂಚಾಲಿ ಎಂಬ ಹೆಸರು ಬಂದದ್ದು ಆಕೆ ಪಾಂಚಾಲ ದೇಶದ ರಾಜಕುಮಾರಿ ಎಂದಲ್ಲ - ಆಕೆಗೆ ಐದು ಜನ ಪತಿಯರಿದ್ದುದರಿಂದ!!!
  • ಪಾಂಡವರಲ್ಲಿ ಮೊದಲನೆಯವನು ಧರ್ಮರಾಯ. ಯುದಿಷ್ಠಿರ ಶ್ರೀರಾಮನ ತಂದೆ, ದಶರಥ ಯಾರೆಂದು ತಿಳಿಯದು.
  • ಗಂಗೂಬಾಯಿ ಹಾನಗಲ್ ಅವರು ಸಂಗೀತ ವಿದುಷಿ. ವಿದುಷಿ ಎಂಬ ಪದದ ಅರ್ಥ "ವಿದೂಷಕ" ಎಂದು!!!

ಹಾಗೆಯೇ ೩ನೇ ತರಗತಿಯಲ್ಲಿ ಹಂಪಿಯ ಬಗ್ಗೆ ಹೇಳುತ್ತಿದ್ದ ಇಂಗ್ಲಿಷ್ ಮೇಡಂ, ಪಠ್ಯ ಪುಸ್ತಕದಲ್ಲಿ ಕಡಲೇ ಕಾಳು ಗಣಪತಿ ಎಂದಿದ್ದುದನ್ನು Spelling mistake ಎಂದು ತಿದ್ದಿಸಿ "ಕಡಲ ಕಲ್ಲು ಗಣಪತಿ" ಎಂದು ಬರೆಸಿದ್ದುದು ಇನ್ನೂ ಮರೆತಿಲ್ಲ!!

ಹೀಗಿರುತ್ತಾರೆ ನಮ್ಮ ಇಂದಿನ ಕೆಲವು ಅಧ್ಯಾಪಕರು....... ನಗುವೂ ಬರುತ್ತದೆ, ವಿಶಾದವೂ ಆಗುತ್ತದೆ.......

Monday, September 04, 2006

ಅಬ್ಬಾ...

ಬೇಗನೆ ಬರುವೆ, ಬರೆವೆ ಎಂದು ಹೇಳಿ ಸಾಕಷ್ಟು ದಿನಗಳೇ ಆದುವು. ಬರೆಯಲು ವಿಷಯಗಳೇನೋ ಸಾಕಷ್ಟಿವೆ, ಆದರೆ ಬರೆಯುವುದೇ ಕಷ್ಟವಾಗಿದೆ! ಈ ಕೀಲಿಮಣೆಯಲ್ಲಿ ಕನ್ನಡ ಕುಟ್ಟುವುದೇ ಕಷ್ಟವೆನಿಸುತ್ತಿದೆ.... ನಿಧಾನವಾಗಿ, ಅಕ್ಷರಗಳನ್ನು ಜೋಡಿಸಿ, type ಮಾಡುವಷ್ಟರಲ್ಲಿ ವಿಚಾರಲಹರಿ ಮರೆತೇ ಹೋಗಿರುತ್ತದೆ. ಅಥವಾ ನೂರೆಂಟು ತಪ್ಪುಗಳಾಗಿ ಅವನ್ನು ತಿದ್ದುವುದೇ ಆಗುತ್ತದೆ!!! ಹಾಳೆಯ ಮೇಲೆ ಬರೆದುಕೊಂಡು ಅದನ್ನು ನಿಧಾನವಾಗಿ type ಮಾಡುವಷ್ಟು ತಾಳ್ಮೆಯೂ ಇಲ್ಲ! ಒಟ್ಟಿನಲ್ಲಿ ನನ್ನ ಬರಹ ಅಂದೊಕೊಂಡ ಹಾಗೆ ಸಾಗುತ್ತಿಲ್ಲ....... :(